ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಎರಡನೆಯ ಉಪನ್ಯಾಸವನ್ನು ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಕ್ಷೇತ್ರದ ವಿದ್ವಾಂಸ ಹಾಗೂ ಕನ್ನಡ ನಾಡು ಮತ್ತು ನುಡಿಗೆ ಸಂಬಂದಿಸಿದಂತೆ ಅತ್ಯುನ್ನತ ಸಂಶೋಧನೆಗಳನ್ನು ನಡೆಸಿರುವ ಪ್ರೊ.ಎಸ್.ಶೆಟ್ಟರ್ ನೀಡುತ್ತಿದ್ದಾರೆ. ಉಪನ್ಯಾಸದ ವಿಷಯ ‘ಜನಸಮುದಾಯದ ಇತಿಹಾಸ ಪ್ರಜ್ಞೆ

ಪ್ರೊ.ಶೆಟ್ಟರ್ ಅವರು ಇತಿಹಾಸ, ಮಾನವಶಾಸ್ತ್ರ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯಗಳ ಕುರಿತಂತೆ 20ಕ್ಕೂ ಹೆಚ್ಚು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. ಅವರ ‘ಶಂಗಂ ತಮಿಳಗಂ’ ಮತ್ತು ಇತ್ತೀಚಿನ ‘ಹಳಗನ್ನಡ’ ಪುಸ್ತಕಗಳು ಕನ್ನಡದ ಪ್ರಾಚೀನತೆಯ ಕುರಿತಂತೆ ಅತಿ ವಿಶಿಷ್ಟ ಒಳನೋಟಗಳನ್ನು ನೀಡುವ ಕೃತಿಗಳು.

ಸಂಚಿ ಜ್ಞಾನ ಸರಣಿ ಉಪನ್ಯಾಸ’ ವಿಶಿಷ್ಟ ಬಗೆಯ ಉಪನ್ಯಾಸ ಸರಣಿಯಾಗಿದ್ದು ತಿಂಗಳಿಗೆ ಒಂದರಂತೆ ಮುಂದಿನ ಒಂದು ವರ್ಷಗಳ ಕಾಲ ನಡೆಯಲಿದೆ. ಈ ಉಪನ್ಯಾಸದ ದೃಶ್ಯ-ಶ್ರಾವ್ಯ ದಾಖಲೀಕರಣ ನಡೆಸಿ ಅದನ್ನು ಅಂತರ್ಜಾಲದ ಮೂಲಕ ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ನಲ್ಲಿ ಹಂಚಿಕೊಳ್ಳುವುದು ‘ಸಂಚಿ ಫೌಂಡೇಶನ್’ನ ಉದ್ದೇಶ. ಈ ಕಾರ್ಯಕ್ರಮಕ್ಕೆ ‘ಸಂಚಿ ಫೌಂಡೇಶನ್’ ಜೊತೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ ಕೈಜೋಡಿಸಿವೆ.

ದೃಶ್ಯ ಮತ್ತು ಶ್ರಾವ್ಯ ದಾಖಲೀಕರಣಕ್ಕೆ ಅನುಕೂಲವಾಗುವಂತೆ ಉಪನ್ಯಾಸ ಸ್ಥಳವನ್ನು ವಿನ್ಯಾಸಗೊಳಿಸಲಾಗುವುದರಿಂದ ಆಸಕ್ತರು 11 ಗಂಟೆಯ ಒಳಗೆ ಸಂಭಾಗಣದೊಳಗೆ ಬಂದು ಆಸೀನರಾಗಬೇಕೆಂದು ವಿನಂತಿಸುತ್ತೇವೆ.

ಉಪನ್ಯಾಸಕಾರರು: ಪ್ರೊ.ಎಸ್. ಶೆಟ್ಟರ್, ಇತಿಹಾಸ ತಜ್ಞ

ವಿಷಯ: ಜನಸಮುದಾಯದ ಇತಿಹಾಸ ಪ್ರಜ್ಞೆ

ದಿನಾಂಕ: 14 ಮಾರ್ಚ್ 2015
ಸಮಯ: ಬೆಳಿಗ್ಗೆ 11 ಗಂಟೆ
ಸ್ಥಳ: ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರು